Thursday, March 12, 2015

ಮೇರು ಕಲೆ ಯಕ್ಷಗಾನ ಬೇರು ಬಿಡಬಾರದಲ್ಲಾ???

ನಿನ್ನೆ ನನಗೊಂದು ಫೋನ್ ಕಾಲ್ ಬಂದಿತ್ತು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರ ಸಾಂಸ್ಕೃತಿಕ ಸಮಿತಿಯವರಂತೆ. ಸಿನೆಮಾ ಹಾಡಿಗೆ ಯಕ್ಷಗಾನ ಸ್ಟೆಪ್ಸ್ ಕಲಿಸಬೇಕೆಂದು ನನ್ನಲ್ಲಿ ಕೇಳಿದರು. ಕಲಿಸುವುದಕ್ಕೆ ಆಗುವ ಸಂಭಾವನೆಯಂತೂ ಇದ್ದೇ ಇದೆ. ಆದರೇ... ಹಾಕುವುದು ತಪ್ಪಾಂಗುಚಿ ಸಿನೆಮಾ ಹಾಡು ಮತ್ತು ಕುಣಿಯುವುದು ಯಕ್ಷಗಾನದ ನೃತ್ಯ. ಅದೂ ಯಕ್ಷಗಾನದ ವೇಷದಲ್ಲಿ. ಬೆಂಗಳೂರಲ್ಲೂ ನುರಿತ -ಅನುಭವಿ ಯಕ್ಷಗಾನ ನಾಟ್ಯ ಗುರುಗಳಿದ್ದಾರೆ. ಬೇಕಾದರೆ ಯಾರನ್ನಾದರೂ ಸಮರ್ಥ ಗುರುವನ್ನು ನಿಮಗೆ ಕಳುಹಿಸುತ್ತೇನೆ. ಪೂರ್ಣ ಪ್ರಮಾಣದ ಯಕ್ಷಗಾನವನ್ನೇ ಮಾಡಿ ಅಂತ ಹೇಳಿದೆ. ಆದರೆ ಅವರಿಗೆ ಸಮಯದ ಅಭಾವ ಮತ್ತು ಸಿನೆಮ ಹಾಡಿಗೆ ಯಕ್ಷಗಾನ ನೃತ್ಯ ಎಲ್ಲೋ ನೋಡಿದ್ದ ಅವರಿಗೆ ಅದೇ ಬೇಕಾಗಿತ್ತು ಇದು ಸಾಧ್ಯವಿಲ್ಲ ಮತ್ತು ಯಕ್ಷಗಾನವನ್ನು ಈ ರೀತಿ ತೋರಿಸುವುದಕ್ಕೆ ಸಾಧ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ. ಇಷ್ಟೆಲ್ಲಾ ಆದ ಮೇಲೆ ನನ್ನ ಮನಸ್ಸಿಗೇನೋ ಕಸಿವಿಸಿಯ ಅನುಭವ. ಯಕ್ಷಗಾನದ ಈ ಸ್ಥಿತಿಗೆ ಯಾರು ಕಾರಣ? ಕಾಟಾಚಾರಕ್ಕೆ ಸಾಂಪ್ರದಾಯಿಕ ನೃತ್ಯಗಳು ಬೇಕು ಎನ್ನುವ ಸಾಂಸ್ಕೃತಿಕ ಘಟಕಗಳದ್ದೋ ? ಯಕ್ಷಗಾನವನ್ನು ಒಂದು ೧೦ ನಿಮಿಷದ ಸಿನೆಮ ಹಾಡಿಗೆ ಕುಣಿಸಿ ತಮ್ಮ ಜೇಬು ಬೆಚ್ಚಗೆ ಮಾಡೋಣ ಎನ್ನುವ ಸೊ ಕಾಲ್ಡ್ ಯಕ್ಷಗಾನ ಗುರುಗಳದ್ದೋ? ಅಲ್ಲ ಇಂತಹ ಕಾರ್ಯಕ್ರಮಗಳಿಗೆ ವೇಷಭೂಷಣಗಳನ್ನುಒದಗಿಸುವರೋ? ಯಕ್ಷಗಾನ ಕಲೆಗೆ ತನ್ನದೇ ಆದ ಅಯಸ್ಕಾಂತೀಯ ಶಕ್ತಿ ಇದೆ. ಯಕ್ಷಗಾನ ವೇಷ ಧರಿಸಿಕೊಂಡ ವ್ಯಕ್ತಿಗೆ ಏನೂ ಗೊತ್ತಿಲ್ಲದಿದ್ದರೂ ಜನರನ್ನು ತನ್ನೆಡೆಗೆ ಆಕರ್ಷಿಸುವ ಶಕ್ತಿ ಆ ಯಕ್ಷಗಾನದ ವೇಷಕ್ಕಿದೆ. ಆದರೆ ಅದರ ದುರುಪಯೋಗವೇ ಹೆಚ್ಚು-ಹೆಚ್ಚು ಆಗುವುದು ಯಕ್ಷಗಾನ ಕಲೆಗೊಂದು ಹಿನ್ನಡೆ ಎಂದರೂ ತಪ್ಪಾಗಲಾರದು. ಯಕ್ಷಗಾನದ ಈ ಆಕರ್ಷಣೀಯ ವೇಷಭೂಷಣವನ್ನು ಸಿನೆಮಾ ಮತ್ತು ಧಾರಾವಾಹಿಗಳ ಹೀರೋ -ಹೀರೋಯಿನ್ ಗಳ ಹಿಂದೆ ಕುಣಿಸುವುದು, ಮೆರವಣಿಗೆಗಳಲ್ಲಿ ನಡೆಸಿಕೊಂಡು ಹೋಗುವುದು, ಸಭೆ-ಸಮಾರಂಭಗಳಲ್ಲಿ ಅತಿಥಿಗಳನ್ನು ಸ್ವಾಗತಿಸಲು ಬಳಸುವುದು ಇತ್ಯಾದಿ ಇತ್ಯಾದಿಯಾಗಿ ಅನೇಕ ರೀತಿಗಳಲ್ಲಿ ನಮ್ಮ ಕಣ್ಣೆದುರೇ ದುರುಪಯೋಗವಾಗುತ್ತಿರುವುದು ಖೇದಕರ. ಯಕ್ಷಗಾನ ಒಂದು ಸ್ವತಂತ್ರವಾದ ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ಕಲೆ. ನರ್ತನ, ಗಾಯನ, ವಾದನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ಪ್ರಪಂಚದ ಏಕಮಾತ್ರ ರಂಗಭೂಮಿಯ ಕಲಾಪ್ರಕಾರ. ಯಕ್ಷಗಾನಕ್ಕೆ ತನ್ನದೇ ಆದ ಪರಂಪರೆಯಿದೆ, ಶಾಸ್ತ್ರೀಯ ನೆಲೆಗಟ್ಟಿದೆ. ಹೇಗೆ ಎಲ್ಲೆಂದರಲ್ಲಿ ಮಾಡುವ ಬೀದಿನಾಟಕ, ಆರ್ಕೆಸ್ಟ್ರಾಗಳ ಹಾಗೆ ಯಕ್ಷಗಾನವನ್ನು ಮಾಡುವ ಹಾಗಿಲ್ಲ. ಹಾಗೆ ನಾವು ಯಕ್ಷಗಾನವನ್ನು ಆಧುನಿಕತೆಯ ನೆಪದಲ್ಲಿ ಪ್ರೇಕ್ಷಕರಿಗೆ ಬೇಕಾದ ಹಾಗೆ ಬದಲಾಯಿಸಿದಲ್ಲಿ ಅದರ ಮೌಲ್ಯ ಕಳೆದುಹೋಗುವುದರಲ್ಲಿ ಸಂಶಯವಿಲ್ಲ. ಯಕ್ಷಗಾನವು ಯಕ್ಷಗಾನದ ರೂಪದಲ್ಲೇ ಉಳಿಯಬೇಕಾದರೆ ನಮ್ಮನ್ನು ನಾವೇ ಪ್ರಶ್ನಿಸಿ, ತರ್ಕಿಸಿ ಅದಕ್ಕೊಂದು ಸರಿಯಾದ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ಹಾಗೆಯೇ ಯಕ್ಷಗುರುಗಳು ಕೂಡ ಸಿನೆಮಾ ಹಾಡುಗಳಿಗೆ ಕುಣಿಸುವ ಪ್ರಸ್ತಾಪಗಳು ಬಂದರೆ ಖಡಾಖಂಡಿತವಾಗಿ ನಿರಾಕರಿಸಬೇಕು. ವೇಷಭೂಷಣಗಳನ್ನು ಒದಗಿಸುವವರು ಸಹ ಒಂದು ಸಲ ಹಣದ ಮುಖ ನೋಡದೆ ಯಕ್ಷಗಾನದ ಶಾಸ್ತ್ರಿಯ ಹಿನ್ನಲೆ ಮತ್ತು ಪರಂಪರೆಯನ್ನು ಅರೆಗಳಿಗೆ ಚಿಂತಿಸಿ ಇಂತಹ ಕಾರ್ಯಗಳಿಗೆ ವೇಷಭೂಷಣಗಳನ್ನು ಕೊಡದಿದ್ದರೆ ಯಕ್ಷಗಾನಕ್ಕೆ ಒಳಿತು.

Wednesday, March 11, 2015

ಸೆಲ್ಫಿಗೊಂದು ಎಲ್ಲೆ ಎಲ್ಲಿದೆ???

ವಾಟ್ಸ್ಸೆಅಪ್ ಲ್ಲೊಂದು ವಿಚಿತ್ರ ಫೋಟೊವೊಂದು ತೇಲಿ ಬಂತು. ಯಾರೊ ಒಬ್ಬ ಪುಣ್ಯಾತ್ಮ ತನ್ನ ದೊಡ್ಡಪ್ಪ ತೀರಿ ಹೋದ ಬೇಜಾರಿನಲ್ಲಿ ದೊಡ್ಡಪ್ಪನ ಪಾರ್ಥಿವ ಶರೀರದ ಜೊತೆಗೊಂದು ಸೆಲ್ಫಿ ತೆಗೆದು ಫೇಸ್ಬುಕ್ನಲ್ಲಿ ಹಾಕಿದ್ದ. ವಿಚಿತ್ರವಾದರೂ ಸತ್ಯ. ನಾನು ಡಿಫರೆಂಟ್ ಟೈಪ್ ಆಫ್ ಸೆಲ್ಫಿಸ್ ನೋಡಿದ್ದೇನೆ. ಆದ್ರೆ ಇದು ಮಾತ್ರ ಸೆಲ್ಫಿಗಳ ಅಪ್ಪನೆನ್ನುವಷ್ಟು ಎಲ್ಲೆಯನ್ನು ದಾಟಿದ ಸೆಲ್ಫಿಯಾಗಿತ್ತು. ಭಾವಜೀವಿಗಳೆನಿಸಿಕೊಂಡ ಭಾರತೀಯರಲ್ಲಿ ಇಂತಹ ಒಂದು ಅಮಾನವೀಯ ಸಂಗತಿಯನ್ನು ನಾವ್ಯಾರು ನಿರೀಕ್ಷಿಸಿರಲ್ಲಿಲ್ಲವೇನೋ..
ಸೆಲ್ಫಿ...ಅಮೇರಿಕಾ ದೇಶದ Robert Cornelius ಎಂಬಾತ ಮೊತ್ತ ಮೊದಲ ಸೆಲ್ಫಿ ೧೮೩೯ರಲ್ಲಿ ತೆಗೆದನೆಂಬ ಐತಿಹ್ಯವಿದೆ. ಕನ್ನಡದಲ್ಲಿ ಇದಕ್ಕೆ ಸ್ವಂತಿ ಅಂತ ಕರೆಯುತ್ತಾರೆ ಎಂದು ಎಲ್ಲೋ ಓದಿದ ನೆನಪು. ಆದರೆ ಈಗ ಸೆಲ್ಫಿಗಳನ್ನು ತೆಗೆಯಲೆಂದೇ ಹೊಸ ತಂತ್ರಜ್ಞಾನದೊಂದಿಗೆ ಬರುತ್ತಿರುವ ಮೊಬೈಲುಗಳಿಗೆ ಲೆಕ್ಕವಿಲ್ಲ. ಸೆಲ್ಫಿಗಳಿಗೆಂದೆ ಮೀಸಲಾದ ಅಪ್ ಗಳೂ ಇವೆ. ಏನೇ ಇರಲಿ ಸೆಲ್ಫಿ ಗೊಂದು ಎಲ್ಲೆ ಇರಲಿ...

Tuesday, March 10, 2015

ನಂದಿದ ಜ್ಯೋತಿಯಲ್ಲಿ ತಮ್ಮ ಚಳಿ ಕಾಯಿಸಿಕೊಳ್ಳುತಿದ್ದಾರೆಯೇ ??

ಮನೆಯ ಬಡತನದ ಅಂಧಕಾರವನ್ನು ದೂರಿಕರಿಸಿ ಮನೆಗೆ ಬೆಳಕಾಗಬೇಕಿದ್ದ ಜ್ಯೋತಿ, ತಮ್ಮ ಮನೆಯನ್ನು ಬೆಳಕಾಗಿಸುತ್ತಾಳೆ ಎಂದು ಹಂಬಲಿಸಿ ತಮ್ಮೆಲ್ಲ ಕಷ್ಟಗಳನ್ನು ಮರೆತು ಆ ಜ್ಯೋತಿಯ ಭವಿಷ್ಯ ಪ್ರಜ್ವಲವಾಗಿ ಬೆಳಗಲಿ ಎಂದು ಹಗಲಿರುಳೂ ಕನಸುಕಂಡ ತಂದೆತಾಯಿಯ ಭಗ್ನಗೊಂಡ ಕನಸು. ತಮ್ಮಿಂದಾದುದು ಅಪರಾದವಲ್ಲ, ಪ್ರಮಾದ.. ರಾತ್ರಿ ೯ ಗಂಟೆಯಾ ಮೇಲೆ ಹುಡುಗಿಯರು ಹೊರಗೆ ಹೋಗುವುದೇ ತಪ್ಪು ಮತ್ತು ಅತ್ಯಾಚಾರವೆಸುಗುವಾಗ ಪ್ರತಿರೋಧಿಸಿದ್ದೆ ತಪ್ಪು ಎಂದು ಹೇಳುವ ಅತ್ಯಾಚಾರಿಯ ಮನ್ಹ ಸ್ಥಿತಿ.. ನಮ್ಮದು ಶ್ರೇಷ್ಠ ಸಂಸ್ಕೃತಿ. ಅಲ್ಲಿ ಹೆಂಗಸರಿಗೆ ಸ್ಥಾನವಿಲ್ಲ ಎನ್ನುವ ಪೊಳ್ಳುವಾದವನ್ನು ಪ್ರತಿಪಾದಿಸುವ ನ್ಯಾಯವಾದಿ.. ಹೀಗೆ ನಿರ್ಭಯ ಅತ್ಯಾಚಾರ ಎನ್ನುವ ಕರಾಳ ಘಟನೆಯ ಸುತ್ತ ಬಿಬಿಸಿ ಮಾಡಿದ ಇಂಡಿಯಾಸ್ ಡಾಟರ್ ಸಾಕ್ಷ್ಯ ಚಿತ್ರದ ಸಂಕ್ಷಿಪ್ತ ನೋಟ. ಈ ಸಾಕ್ಷ್ಯಚಿತ್ರವನ್ನು ಅದೆಷ್ಟು ಮಂದಿ ನೋಡಿದ್ದಾರೋ ಗೊತ್ತಿಲ್ಲ. ಆದರೆ ಸಾಮಾಜಿಕ ತಾಣಗಳಲ್ಲಂತೂ ಇದರದ್ದೇ ಸುದ್ದಿ. ಇದನ್ನು ವಿರೋಧಿಸಿದವರು ಒಂದೆಡೆಯಾದರೆ, ಇದು ವಸ್ತುನಿಷ್ಠ ಮತ್ತು ನೈಜ ಪರಿಸ್ಥಿತಿಯನ್ನು ಬಿಂಬಿಸಿದೆ ಎಂದು ಹೇಳುವ ಇನ್ನೊಂದು ವರ್ಗ. ಕೆಲವರು ಸ್ವಂತ ನಿಲುವಿನಿಂದ ಹೇಳಿದರೆ ಇನ್ನು ಕೆಲವರು ಬೇರೆಯವರ ನಿಲುವನ್ನೇ ತಮ್ಮ ನಿಲುವೆಂದು ತೂರ್ಪಡಿಸುವವರದೊಂದು ವರ್ಗ. ಇದೊಂದು ಅಂತರರಾಷ್ಟ್ರೀಯ ಹುನ್ನಾರ ಎಂದು ಹೇಳುವ ಕೇಂದ್ರ ಸಚಿವರು. ಹೀಗೆ ಪರ-ವಿರೋಧಗಳ ನಡುವೆಯೂ ನಾನು ಕಂಡಂತೆ ಕೆಲವು ವಸ್ತುನಿಷ್ಠ ಸಂಗತಿಗಳ ಜೊತೆಜೊತೆಗೆ ಕೆಲವು ಲೋಪದೋಷಗಳು, ಆಕ್ರೋಶ ಮತ್ತು ಅಸಹನೀಯತೆಯನ್ನು ಹುಟ್ಟುಹಾಕಬಲ್ಲ ಅಂಶಗಳೂ ಇವೆ. ನಾನು ಕಂಡಂತೆ ನನಗೆ ಗೋಚರಿಸಿದ ಕೆಲವು ಅಂಶಗಳು ಈ ರೀತಿ ಇದೆ. ೧) ಶೀರ್ಷಿಕೆ - ಇಂಡಿಯಾಸ್ ಡಾಟರ್ ಎನ್ನುವ ಶೀರ್ಷಿಕೆಯೆ ತುಂಬಾ ಸಾರ್ವತ್ರೀಕರಿಸಲಾಗಿದೆ. ಬಿಬಿಸಿ ಹೆಸರಿಟ್ಟಂತೆ ಭಾರತದ ಎಲ್ಲಾ ಹೆಣ್ಣುಮಕ್ಕಳ ಪರಿಸ್ಥಿತಿ ನಿರ್ಭಯ ತರಹ ಇಲ್ಲ. ಹಾಗೆಂತ ಎಲ್ಲ ಗಂಡಸರು ಅತ್ಯಾಚಾರಿಗಳು, ಲೈಂಗಿಕ ಉಪಟಳವನ್ನು ಕೊಡುವವರೂ ಅಲ್ಲ. ಹಾಗೆ ನೋಡಿದರೆ ವಿಚಾರವಾದಿ ಎನಿಸಿಕೊಂಡ ನಮ್ಮ ಬೆಂಗಳೂರಿನ 'ಇಂಡಿಯಾಸ್ ಡಾಟರ್' ಒಬ್ಬರು ಈ ನಿರ್ಭಯ ಘಟನೆಯ ಅಪರಾಧಿಗಳಲ್ಲಿ ಒಬ್ಬನಾದ ಬಾಲಾಪರಾಧಿಗೆ ಶಿಕ್ಷೆ ಕೊಡಬಾರದು ಎಂದು ಮಾದ್ಯಮಗಳಲ್ಲಿ ಚರ್ಚಿಸಿದ್ದು ಈ ಶೀರ್ಷಿಕೆಗೆ ಅಭಾಸವುಂಟುಮಾಡಿದ ಅನುಭವವನ್ನು ಕೊಡುತ್ತದೆ. (https://www.youtube.com/watch?v=wH_wMxZYyss) ೨) ಅಪರಾಧಿ ಮುಕೇಶನ ಮಾತುಗಳಲ್ಲಿ ಕಂಡುಬಂದ ನಿರ್ಲಿಪ್ತತೆ ಮತ್ತು ತನ್ನ ತಂಡ ಮಾಡಿದ ಅಪರಾಧವನ್ನು ಸಮರ್ಥಿಸುವ ನಿಲುವು ಹಾಗೂ ಹಿಂದೆ ಅತ್ಯಾಚಾರ ಮಾಡಿದ ಶ್ರೀಮಂತರಿಗೇಕೆ ಶಿಕ್ಷೆ ಕೊಡಲಿಲ್ಲ ಎನ್ನುವ ಪ್ರಶ್ನೆ... ಇವೆಲ್ಲವೂ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಅಣಕವಾಡುವಹಾಗಿತ್ತು. ೩) ಇನ್ನೂ ಅಸಹ್ಯವಾಗಿ ಗೋಚರಿಸುವುದು ಅಪ್ರಭುದ್ದ ಹೇಳಿಕೆಗಳನ್ನು ಕೊಟ್ಟ ಇಬ್ಬರು ನ್ಯಾಯವಾದಿಗಳು. 'ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ:' ಎನ್ನುವ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಒಂದೇ ವಾಕ್ಯದಲ್ಲಿ ಕೊಲೆ ಮಾಡಿದಾತ ನಿಜವಾಗಿಯೂ ಈ ಅತ್ಯಾಚಾರಿಗಳಷ್ಟೇ ಅಪರಾಧಿಸ್ಥಾನದಲ್ಲಿ ನಿಲ್ಲಲ್ಪಡುತ್ತಾನೆ. ೪) ಇನ್ನು ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ.. ಅಪರಾಧ ಘಟಿಸಿ ವರ್ಷಗಳೇ ಕಳೆದರೂ ಇನ್ನೂ ಶಿಕ್ಷಿಸದೆ ಅನ್ನ ಹಾಕಿ ಅಪರಾಧಿಗಳನ್ನುಪೋಷಿಸುತ್ತಿರುವುದು. ೫) ಅತ್ಯಾಚಾರಿಯ ಸಂದರ್ಶನಕ್ಕಾಗಿ ಬಿಬಿಸಿ ಆತನಿಗೆ ೪೦೦೦೦ ರೂಪಾಯಿ ಲಂಚ ಕೊಟ್ಟಿದೆ ಎನ್ನುವ ಅಂಶವೂ ಕೂಡ ಆಘಾತಕಾರಿಯಾಗಿದೆ. ಹಾಗೆ ನೋಡಿದರೆ ಬಿಬಿಸಿ ಇನ್ನು ಯಾರ್ಯಾರಿಗೆ ಎಷ್ಟು ಲಂಚ ಕೊಟ್ಟಿರಬಹುದು ಎನ್ನುವುದು ನಮ್ಮ ಊಹನೆಗಷ್ಟೇ ಸೀಮಿತವಾಗಿರಲಿ. ಒಟ್ಟಿನಲ್ಲಿ ಪರ-ವಿರೋಧ , ತಪ್ಪು-ಒಪ್ಪು, ಒಳ್ಳೆಯದು-ಕೆಟ್ಟದ್ದು ಇವುಗಳ ನಡುವೆಯೂ ಈ ಸಾಕ್ಷ್ಯಚಿತ್ರದಿಂದ ನಾವು ಅರಿತು ಕಲಿಯಬೇಕಾದ್ದು ಬಹಳಷ್ಟಿದೆ. ಬಡತನ , ಶಿಕ್ಷಣದ ಕೊರತೆ , ಮಾರ್ಗದರ್ಶನದ ಕೊರತೆ , ನಿರುದ್ಯೋಗ ಇವುಗಳು ಅತ್ಯಾಚಾರಕ್ಕೆ ಕಾರಣವಾಗುವ ಅಂಶಗಳು ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟ . ಹಾಗೆಂತ ಶಿಕ್ಷಿತ ಶ್ರೀಮಂತರು ಅತ್ಯಾಚಾರ ಮಾಡುವುದಿಲ್ಲವೆಂದು ಅದರ ಅರ್ಥವಲ್ಲ . ಬಹುಮುಖ್ಯವಾಗಿ ನೈತಿಕ ಶಿಕ್ಷಣದ ಕೊರತೆಯೆ ಮೂಲಕಾರಣವೆನ್ನಬಹುದು. ಮೌಲ್ಯಯುತ ಸಮಾಜ ನಿರ್ಮಾಣಕ್ಕೆ ಮೂಲಶಿಕ್ಷಣದ ಜೊತೆಗೆ ನೈತಿಕ ಮತ್ತು ಮೌಲ್ಯ ಶಿಕ್ಷಣವು ಕದ್ದಾಯವಾದಾಗ ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸ್ತ್ರೀಯೋಬ್ಬಳನ್ನು ಕಂಡಾಗ ತನ್ನ ತಾಯಿಯನ್ನೊ ಸಹೋದರಿಯನ್ನೊ ಅರೆಗಳಿಗೆ ನೆನೆಸಿಕೊಂಡರೆ ಪರಿಸ್ಥಿತಿ ಸುಧಾರಿಸಬಹುದೇನೋ ?!!